
ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂಶೋಧನೆಯ ಗುಣ ಇರುತ್ತದೆ. ಅದು ಗೃಹಿಣಿಯೇ ಆಗಿರಲಿ, ಮೆಕ್ಯಾನಿಕ್ಕೇ ಆಗಿರಲಿ. ಆ ಸಂಶೋಧನೆಗೊಂದು ಮೂರ್ತರೂಪ ನೀಡುವ ಅಗತ್ಯವಿದೆ. ಅದನ್ನೇ ಈ ಸಂಶೋಧನಾ ಪ್ರಬಂಧಗಳು ಮಾಡುವುದು. ಸಂಶೋಧನೆ ಎನ್ನುವುದು ಒಂದು ಕೌಶಲ್ಯವಲ್ಲ ಅದೊಂದು ಹೊಸತನ. ಹೊಸತನವನ್ನು ಹುಡುಕುವ ಮಾರ್ಗ. ನಮ್ಮಲ್ಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರವಿದೆ ಎಂದರೆ ಅಲ್ಲಿ ಸಂಶೋಧನೆಯನ್ನು ಮಾಡುವ ಅಗತ್ಯವೇ ಇಲ್ಲ. ಎಲ್ಲಿ ಪ್ರಶ್ನೆಗಳು ಮಾತ್ರ ಇವೆಯೋ, ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆಯೋ, ಆ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಿದಾಗ ನಮ್ಮ ಸಂಶೋಧನೆಯ ಮೌಲ್ಯವರ್ಧನೆಯಾಗುತ್ತದೆ ಎಂದು ಮೈಸೂರಿನ ಎಸ್ಡಿಎಂ ರಿಸರ್ಚ್ ಸೆಂಟರ್ನ ಪ್ರೋ. ಬಿ ವೆಂಕಟರಾಜ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ ಆಯೋಜಿಸಿದ್ದ ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಪ್ರಭಾವಶಾಲಿ ಸಂಶೋಧನಾ ಬರಹ ಎಂಬ ವಿಷಯದ ಕುರಿತು ಉಪನ್ಯಾಸಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ, 21 ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯಾಗಿದ್ದವರನ್ನು ಇಂದು ವೇದಿಕೆ ಮೇಲೆ ನೋಡುತ್ತಿರುವುದು ಸಂತೋಷ ತಂದಿದೆ. ಸಂಶೋಧನಾ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಯೇ ಇದಕ್ಕೆ ಕಾರಣ ಎಂದರು. ಜೊತೆಗೆ ಸಂಶೋಧನೆ ಬರಿ ಜರ್ನಲ್ಗಳ ಪಬ್ಲಿಕೇಷನ್ಗೆ ಮಾತ್ರವೇ ಸೀಮಿತವಾಗಿರಬಾರದು. ಇದರಿಂದ ಸಮಾಜದ ಮೇಲೆಯೂ ಪ್ರಭಾವ ಬೀರಬೇಕು ಎಂದರು. ಹಾಗೆಯೇ ಸಂಶೋಧನೆ ಆರಂಭಿಸಿದ ನಂತರ ನಮ್ಮ ಗಮನ ಬೇರೆ ಬೇರೆ ಕಡೆ ವಾಲಬಹುದು ಇದ್ಯಾವುದನ್ನೂ ಲೆಕ್ಕಿಸದೆ ನಮ್ಮ ಗಮನವನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವುದು ಕೂಡ ದೊಡ್ಡ ಸಾಹಸವೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಂಶುಪಾಲ ಪೆÇ್ರ. ವಿಷ್ಣುಗಣಪತಿ ಭಟ್, ಐಕ್ಯುಎಸಿ ಸಂಯೋಜಕಿ ಡಾ. ರವಿಕಲಾ, ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಡಾ. ರವಿಕಲಾ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತಾ ಜೆ. ರಾವ್ ನಿರೂಪಿಸಿದರು.