• 08251 236599
  • 08251 236444
  • vvsputtur@gmail.com

ಪತ್ರಿಕಾಗೋಷ್ಠಿ : ವಿವೇಕಾನಂದ ಜಯಂತಿ ಆಚರಣೆ & ರೇಡಿಯೋ ಪಾಂಚಜನ್ಯ 90.8 ಎಫ್.ಎಂ ಲೋಕಾರ್ಪಣೆ

ಮಂಗಳೂರು :  ದ್ವನಿ ಮಾಧ್ಯಮದ ಮೂಲಕ ಸಮುದಾಯ ಸಬಲೀಕರಣದ ಸಂದೇಶವನ್ನು ಪ್ರಸಾರ ಮಾಡುವ ಸದುದ್ದೇಶದಿಂದ, ಸಮುದಾಯದಿಂದ, ಸಮುದಾಯಕ್ಕಾಗಿ, ಸಮುದಾಯವೇ ನಡೆಸುವ ರೇಡಿಯೋ ಪಾಂಚಜನ್ಯ 90.8 ಎಫ್.ಎಂ ಅನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ೧೦೦ ವರ್ಷಗಳು ಶಿಸ್ತುಬದ್ಧ ಇತಿಹಾಸದ ಹಿನ್ನೆಲೆ ಇರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಪುತ್ತೂರಿನ ಜನತೆಗಾಗಿ ಪರಿಚಯಿಸುತ್ತಿದೆ.

ನಮ್ಮ ಸಮಾಜದಲ್ಲಿ ಅಕ್ಷರ ಮಾಧ್ಯಮದಲ್ಲಿ ಎಷ್ಟು ಜ್ಞಾನ ಸಂಗ್ರಹಣೆಯಾಗಿದೆಯೋ ಅಷ್ಟೇ ಆಳವಾದ ವ್ಯಾಪಕವಾದ, ಸಾಂಪ್ರದಾಯಿಕ ವಿದ್ವತ್ತು ಜನರ ಮಾತುಗಳಲ್ಲಿದ್ದು, ಅದನ್ನು ಜನಾಂಗದಿಂದ ಜನಾಂಗಕ್ಕೆ ದಾಟಿಸುವ ಉದ್ದೇಶ ಹಾಗೂ ಒಂದು ದನಿ, ಅನುಭವ ಅದನ್ನು ತಮ್ಮ ತಮ್ಮೊಳಗೆ ಮತ್ತು ಇತರರೊಂದಿಗೆ ಹರಡಿಕೊಳ್ಳುವುದು, ಇಂತಹ ಅಗತ್ಯವನ್ನು ಸಮರ್ಥವಾಗಿ ರೂಪಿಸಬಹುದಾದ ಸಮುದಾಯ ರೇಡಿಯೋವನ್ನು ಪುತ್ತೂರಿನ ಜನತೆಗಾಗಿ ಪರಿಚಯಿಸುತ್ತಿದೆ.

ರಾಷ್ಟ್ರೀಯತೆ ಭಾವದಿಂದ ಸಂಸ್ಕಾರ-ಸಂಸ್ಕೃತಿಗಳ ತಳಹದಿಯಲ್ಲಿ ರೇಡಿಯೋ ಪಾಂಚಜನ್ಯ ರೂಪುಗೊಳ್ಳುತ್ತಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಜನವರಿ 12, 2017 ರಂದು ನಡೆಯಲಿರುವ ವಿವೇಕಾನಂದ ಜಯಂತಿ ಆಚರಣೆಯ ಸಂದರ್ಭದಲ್ಲಿ ಕೇಂದ್ರ ವಾಣಿಜ್ಯ, ಕೈಗಾರಿಕೆ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ವಿವೇಕಾನಂದ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾಗಿರುವ ನೂತನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕೇಂದ್ರ ’ರೇಡಿಯೋ ಪಾಂಚಜನ್ಯ 90.8 ಎಫ್.ಎಂ’ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪುತ್ತೂರಿನ ಮಾಜಿ ಶಾಸಕರಾದ ಶ್ರೀ ಕೆ.ರಾಮ ಭಟ್ ಉಪಸ್ಥಿತರಿರುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖ್ ಶ್ರೀ ಪ್ರದೀಪ್ ದಿಕ್ಸೂಚಿ ಭಾಷಣ ಮಾಡುವರು.

ರೇಡಿಯೋ ಪಾಂಚಜನ್ಯದಲ್ಲೇನಿದೆ?:
ಶಿಕ್ಷಣ, ಕ್ರೀಡೆ, ವಿಜ್ಞಾನ, ಸಂಗೀತ, ತಂತ್ರಜ್ಞಾನ, ಸಾಹಿತ್ಯ, ಕೃಷಿ, ಯಕ್ಷಗಾನ, ಹೈನುಗಾರಿಕೆ, ನಾಟಕ, ಹರಿಕಥೆ, ತಾಳಮದ್ದಳೆ, ವ್ಯವಹಾರ, ಸ್ವಾ-ಉದ್ಯೋಗ, ಸಮುದಾಯ ಅಭ್ಯುದಯ, ಸಮಾಜ ಕಲ್ಯಾಣ, ಸಾಂಸ್ಕೃತಿಕ ಬೆಳವಣಿಗೆ, ಸ್ಥಳೀಯ ಸಮಾರಂಭಗಳು, ಹಬ್ಬಗಳು, ಉತ್ಸವಗಳು, ಮೇಳಗಳು, ಸಾಹಿತ್ಯ ಸಮ್ಮೇಳನ, ಪ್ರಕಟಣೆಗಳು, ಜಾಹೀರಾತುಗಳು.. ಇನ್ನೂ ಹಲವು.

ಉದ್ಯಮ, ಮಾರುಕಟ್ಟೆ, ಶಿಕ್ಷಣ ಸಂಸ್ಥೆ, ವಾಹನ, ಮೊಬೈಲ್ ಕಛೇರಿಗಳಲ್ಲಿ, ಅಡಿಗೆ ಮನೆಗಳಲ್ಲಿ…… ಪಾಂಚಜನ್ಯ ಮೊಳಗಲಿ ಎಂಬ ಸದುದ್ದೇಶದಿಂದ ಜನವರಿ 12, ವಿವೇಕಾನಂದ ಜಯಂತಿಯಂದು ’ರೇಡಿಯೋ ಪಾಂಚಜನ್ಯ 90.8 ಎಫ್.ಎಂ’ ಅನ್ನು ಲೋಕಾರ್ಪಣೆಗೊಳಿಸಲಾಗುವುದು ಎಂಬ ಕುರಿತು  ವಿವರಗಳನ್ನು ದಿನಾಂಕ 4-1-2016 ರಂದು ಮಂಗಳೂರಿನ ಹೋಟೆಲ್ ಓಷಿಯನ್ ಪರ್ಲ್­ನಲ್ಲಿ  ಪತ್ರಿಕಾಗೋಷ್ಠಿಯಲ್ಲಿ ನೀಡಲಾಯಿತು.

Highslide for Wordpress Plugin